Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮೀನು ಮಾರಾಟ ಫೆಡರೇಷನ್‌ಗೆ ವಂಚಿಸಿದ ಪ್ರಕರಣ: ಮಂಜುನಾಥ ಖಾರ್ವಿ ಬಂಧನ..!!

ಉಡುಪಿ : ಸೆ.22: ದೃಶ್ಯ ನ್ಯೂಸ್ : ನ್ಯಾಯಾಲಯದ ಆದೇಶದಂತೆ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಲಿಮಿಟೆಡ್‌ಗೆ ಹಣ ಪಾವತಿಸದ ಆರೋಪದಲ್ಲಿ ಮಂಜುನಾಥ ಖಾರ್ವಿಯನ್ನು ಬಂಧಿಸಿದ್ದಾರೆ. ಫೆಡರೇಷನ್‌ಗೆ ಮಂಜುನಾಥ ಖಾರ್ವಿ ನೀಡಿದ ಮೂರು ಚೆಕ್‌ಗಳು ಬೌನ್ಸ್ ಆದ ಹಿನ್ನೆಲೆಯಲ್ಲಿ ಒಟ್ಟು 88 ಲ.ರೂ. ಪಾವತಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು.

ನ್ಯಾಯಾಲಯದ ತೀರ್ಪಿನಂತೆ ಹಣ ಮರುಪಾವತಿ ಮಾಡಲು ವಿಫಲನಾದ ಮಂಜುನಾಥ್ ಖಾರ್ವಿ ವಿರುದ್ಧ ವಾರಂಟ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಉಪ್ಪುಂದದ ಮನೆಯಲ್ಲಿ ಬಂಧಿಸಿ 5ನೇ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಲಿ. ಸಂಸ್ಥೆಯಿಂದ ಮಂಜುನಾಥ ಖಾರ್ವಿ ಮೀನು ಖರೀದಿ ಮಾಡಿದ್ದ ಅಲ್ಲದೆ ಫೆಡರೇಷನ್‌ಗೆ ಮೀನು ಮಾರಾಟವಾದ ಕಮಿಷನ್ ಕೂಡ ಬಾಕಿ ಇರಿಸಿದ್ದ. ಈ ಮೊತ್ತಕ್ಕೆ ಮೂರು ಚೆಕ್‌ಗಳನ್ನು ಫೆಡರೇಷನ್‌ಗೆ ನೀಡಿದ್ದ. ಆ ಚೆಕ್‌ಗಳನ್ನು ಬ್ಯಾಂಕ್‌ಗೆ ನೀಡಿದಾಗ ಖಾತೆಯಲ್ಲಿ ಹಣವಿಲ್ಲದೆ ಅಮಾನತುಗೊಂಡಿದ್ದವು ಮತ್ತು ಇದಕ್ಕೆ ಸಂಬಂಧಿಸಿದ ನೋಟಿಸ್ ನೀಡಿದರೂ ಬಾಕಿ ಮೊತ್ತ ಪಾವತಿರಲಿಲ್ಲ ಎನ್ನಲಾಗಿದೆ. ಈ ಕುರಿತು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಲಾಗಿತ್ತು. ಮಂಜುನಾಥ ಖಾರ್ವಿ ಮೇಲೆ ಮೂರು ಪ್ರಕರಣ ದಾಖಲಾಗಿತ್ತು.

ನ್ಯಾಯಾಲಯ ಮೂರು ಪ್ರಕರಣಗಳಲ್ಲಿ ಮಂಜುನಾಥ ಖಾರ್ವಿಗೆ 5 ಲಕ್ಷ ರೂ. 53 ಲಕ್ಷ ರೂ. ಮತ್ತು 30 ಲಕ್ಷ ರೂ. ಸೇರಿದಂತೆ ಒಟ್ಟು 88 ಲಕ್ಷ ರೂ. ಪಾವತಿಸುವಂತೆ ಈ ಹಿಂದೆ ತೀರ್ಪು ನೀಡಿತ್ತು. ದೂರುದಾರರ ಪರ ವೆರಿಟಾಸ್ ಲೆಗೀಸ್ ಅಸೋಸಿಯೇಷನ್ ಮಂಗಳೂರಿನ ವಕೀಲರಾದ ರಾಘವೇಂದ್ರ ರಾವ್, ಗೌರಿ ಶೆಣೈ ವಾದಿಸಿದ್ದರು.

Leave a Reply

Your email address will not be published. Required fields are marked *