
ತಲ್ಲೂರಿನ ಶ್ರೀ ಮಹಾಲಿಂಗೇಶ್ವರ ಹಾಗೂ ವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ಅಂದಾಜು 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಹಾಲಿಂಗೇಶ್ವರ ದೇವರ ಸ್ವರ್ಣ ಮುಖವಾಡ ಸಮರ್ಪಣೆಯ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಹಿರಿಯ ಪತ್ರಕರ್ತ ಮಾತನಾಡಿ
ಪರಶುರಾಮ ಸೃಷ್ಠಿಯ ಮೋಕ್ಷದಾಯಕ ಸಪ್ತಕ್ಷೇತ್ರಗಳಲ್ಲಿ ನಾಲ್ಕು ಪುಣ್ಯ ಕ್ಷೇತ್ರಗಳನ್ನು ಹಾಗೂ ಪಂಚ ಶಂಕರನಾರಾಯಣ ಪುಣ್ಯ ಕ್ಷೇತ್ರಗಳನ್ನು ಹೊಂದಿರುವ ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಧಾರ್ಮಿಕ, ಶೃದ್ದಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ಇಲ್ಲಿನ ಆಸ್ತಿಕ ಪರಂಪರೆಯ ಹೆಗ್ಗುರುತು ಎಂದು ಪತ್ರಕರ್ತ ರಾಜೇಶ್ ಕೆ.ಸಿ ಅಭಿಪ್ರಾಯಪಟ್ಟರು. ಹಾಗೂ
ದೇವಸ್ಥಾನಗಳು ಗ್ರಾಮದ ಜನರ ಭಾವನಾತ್ಮಕ ಸಂಬಂಧಗಳ ಕೊಂಡಿಗಳಂತೆ ಕಾರ್ಯ ನಿರ್ವಹಿಸುತ್ತದೆ ದೇವಾಲಯದ ಜೀರ್ಣೋದ್ದಾರ ಕಾರ್ಯಕ್ರಮಗಳಲ್ಲಿ ಮೇಲು-ಕೀಳು ಹಾಗೂ ಜಾತಿ -ಪರಿಭೇದವಿಲ್ಲದೆ ಸಮರ್ಪಣಾ ಮನೋಭಾವದಿಂದ ಎಲ್ಲರೂ ಒಟ್ಟಾಗಿ ಸೇವೆ ಸಲ್ಲಿಸಿರುವುದರಿಂದ ಸಮನ್ವಯ ಭಾವದಿಂದ ಗ್ರಾಮದಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎನ್ನುವುದಕ್ಕೆ ತಲ್ಲೂರು ಪರಿಸರ ಒಂದು ಉತ್ತಮ ಉದಾಹರಣೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ನ್ಯಾಯವಾದಿ ಟಿ.ಬಿ ಶೆಟ್ಟಿ ಅವರು, ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ಮಹಾಲಿಂಗೇಶ್ವರ, ರಕ್ತೇಶ್ವರಿ ಹಾಗೂ ಗರೋಡಿಯ ಜೀರ್ಣೋದ್ದಾರ ಕಾರ್ಯಗಳು ನಡೆಯುತ್ತಿದೆ. ಊರ ಹಾಗೂ ಪರವೂರ ಬಂಧುಗಳ ಸಮರ್ಪಣಾ ಮನೋಭಾವದಿಂದ ಇದು ಸಾಧ್ಯವಾಗಿದೆ. ಯಶಸ್ವಿ ಕಾರ್ಯಗಳಲ್ಲಿ ನೇತಾರನ ಪಾತ್ರ ಪ್ರಮುಖವಾಗಿರುವಂತೆ ದೇಗುಲದ ಆಡಳಿತ ಮೊಕ್ತೇಸರರಾದ ವಸಂತ ಅರ್ ಹೆಗ್ಡೆಯವರ ದೃಢತೆ ಹಾಗೂ ಇಚ್ಛಾಶಕ್ತಿಗಳೇ ಈ ದೇವಸ್ಥಾನದ ಅಭಿವೃದ್ದಿಗೆ ಸತ್ಪ್ರೇರಣೆಯಾಗಿದೆ ಎಂದರು. ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಕುಶಲ್ ಶೆಟ್ಟಿ, ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ, ಉದ್ಯಮಿಗಳಾದ ಕೆ. ಜಯಕರ ಶೆಟ್ಟಿ ಸುಪ್ರೀಂ ಟೈಲ್ಸ್, ಪ್ರಭಾಕರ ಶೆಟ್ಟಿ, ತಲ್ಲೂರು ಗ್ರಾ.ಪಂ ಅಧ್ಯಕ್ಷ ಗಿರೀಶ್ ನಾಯ್ಕ್, ಸ್ಥಳೀಯ ಪ್ರಮುಖರಾದ ಗೋಪಾಲಕೃಷ್ಣ ಶೆಟ್ಟಿ ದೊಡ್ಮನೆ, ಸುಬ್ಬಣ್ಣ ಶೆಟ್ಟಿ, ಮಾಕ ಪೂಜಾರಿ, ಟಿ. ನಾರಾಯಣ ಶೆಟ್ಟಿ, ನಾಗಯ್ಯ ಶೆಟ್ಟಿ, ಶೇಖರ ಶೆಟ್ಟಿ, ವಿಠಲ ಶೆಟ್ಟಿ ಹೊರಳಿಬೆಟ್ಟು, ಕರಿಯ ಪೂಜಾರಿ, ಕಿರಣ್ ದೇವಾಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂಜೀವ ದೇವಾಡಿಗ, ಶ್ರೀರಾಮ, ರವೀಂದ್ರ ಮೊಗವೀರ, ವನಜಾ ಶೆಟ್ಟಿ, ಜಯಲಕ್ಷ್ಮೀ ಕೊಠಾರಿ, ಅಶೋಕ ದೇವಾಡಿಗ ಇದ್ದರು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ವಸಂತ ಆರ್ ಹೆಗ್ಡೆ ಸ್ವಾಗತಿಸಿದರು. ವಿಶ್ವನಾಥ್ ಭಟ್ ವೇದಘೋಷ ಮಾಡಿದರು. ದೇವರಾಜ ತಲ್ಲೂರು ನಿರೂಪಿಸಿದರು. ತಾಲೂಕು ಯೋಜನಾಸೇವಾ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ ವಂದಿಸಿದರು.
ಧಾರ್ಮಿಕ ಕಾರ್ಯಕ್ರಮ:
ಗುರುವಾರ ಸಂಜೆ ಸಾವಿರಾರು ಜನರ ಉಪಸ್ಥಿತಿಯಲ್ಲಿ ಊರ್ಣಕುಂಭದ ವೈಭವದ ಪುರಮೆರವಣಿಗೆಯಲ್ಲಿ ಚಿನ್ನದ ಮುಖವಾಡವನ್ನು ದೇವಸ್ಥಾನಕ್ಕೆ ತಂದು ಸಂಕಲ್ಪ ಪೂಜೆಯನ್ನು ಮಾಡಲಾಗಿತ್ತು. ಶತರುದ್ರಾನುಷ್ಟಾನ, ತತ್ವ ಕಲಶಾಭಿಷೇಕ ಹಾಗೂ ಪವನಹೋಮದೊಂದಿಗೆ ಶ್ರೀ ದೇವರಿಗೆ ಸ್ವರ್ಣ ಮುಖವಾಡದ ಸಮರ್ಪಣಾ ಕಾರ್ಯ ನೆರವೇರಿತು. ಮಧ್ಯಾಹ್ನ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜಮರುಪ್ರಸಾದ ಸ್ವೀಕರಿಸಿದರು. ತಂತ್ರಿ ರಮಾನಂದ ಅವಭೃತರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
Leave a Reply