
ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನವು ಮಾನವನ ಬದುಕು ಮತ್ತು ಅಭಿವೃದ್ದಿಗೆ ವರದಾನವಾಗಿದೆ. ಎ ಐ ಬಳಕೆ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸುತ್ತದೆ. ಅಧ್ಯಯನ, ಸಂಶೋಧನೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಶಿಕ್ಷಣ ಫೌಂಡೇಶನ್ ಬೆಂಗಳೂರು ಇದರ ತರಬೇತುದಾರರಾದ ಶ್ರೀಮತಿ ಆಶಾ ಶೆಟ್ಟಿ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣ ಇಲ್ಲಿ ಆಯೋಜಿಸಿದ್ದ ಎಐ ಕುರಿತ ಕೌಶಲ್ಯ ಅಭಿವೃದ್ಧಿ ಸರ್ಟಿಫಿಕೇಟ್ ಕೋರ್ಸ್ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾರ್ಯಾಗಾರದ ಕುರಿತು ಎಂ.ಕಾಂ.ವಿದ್ಯಾರ್ಥಿಗಳಾದ ಶಶಾಂಕ್,ವಿಜಯಲಕ್ಷ್ಮಿ ಮತ್ತು ಪಲ್ಲವಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ತಮ್ಮ ಭಾಷಣದಲ್ಲಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಎ ಐ ಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಸ್ನಾತಕೋತ್ತರ ವಿಭಾಗ ಸಂಯೋಜಕರಾದ ಕು.ಪ್ರಜ್ಞಾ ತರಬೇತಿ ಕಾರ್ಯಕ್ರಮ ಸಂಘಟಿಸಿ ಪ್ರಸ್ತಾವನೆಗೈದರು. ಉಪನ್ಯಾಸಕರಾದ ಶ್ರೀ ಸುಬ್ರಹ್ಮಣ್ಯ ಅಡಿಗ, ಶ್ರೀಮತಿ ಶೈಲಜಾ ಮತ್ತು ಶ್ರೀ ರಾಜೇಂದ್ರ ಅವರು ಉಪಸ್ಥಿತರಿದ್ದರು.















Leave a Reply