
ಝಾನ್ಸಿ: ಯುವತಿಯೊಬ್ಬಳು ದೇವರನ್ನೇ ಮದುವೆಯಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದ್ದು, ಇಡೀ ರಾಜ್ಯದಲ್ಲಿ ಈ ಮದುವೆ ಕುರಿತು ಚರ್ಚೆಯಾಗುತ್ತಿದೆ.
ದೇವರ ಮೇಲಿನ ಭಕ್ತಿಯಿಂದ ತನ್ನ ಆರಾಧ್ಯ ದೈವ ಶಿವನನ್ನು ಮದುವೆಯಾಗಿರುವ ಯುವತಿಯನ್ನು ಗೋಲ್ಡಿ ರಾಯಕ್ವಾರ್ ಎಂದು ಗುರುತಿಸಲಾಗಿದೆ. ಪವಿತ್ರ ಮಾಸವಾದ ಶ್ರಾವಣದಲ್ಲಿ ಬಡಗಾಂವ ಗೇಟ್ನ ಹೊರಭಾಗದಲ್ಲಿರುವ ಬ್ರಹ್ಮಕುಮಾರಿ ಆಶ್ರಮದಲ್ಲಿ ವಿವಾಹ ನೆರವೇರಿದ್ದು, ಈ ಮದುವೆಯಲ್ಲಿ ಅರಿಶಿನ ಕಾರ್ಯಕ್ರಮ, ಸಂಗೀತ, ವರಮಾಲೆಯಿಂದ ಹಿಡಿದು ಸಕಲ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಮದುವೆಯ ಮುಂಚೆ ಶಿವಲಿಂಗವನ್ನು ರಥದ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಯಿತು. ನಂತರ ಯುವತಿಯುಶಿವಲಿಂಗಕ್ಕೆ ಮಾಲೆ ಹಾಕಿ ಏಳು ಸುತ್ತು ಹಾಕಿದ್ದಾಳೆ. ಮದುವೆಗೆ ಬಂದಿದ್ದ ಜನರಿಗೆ ಔತಣಕೂಟವನ್ನೂ ಏರ್ಪಡಿಸಲಾಗಿತ್ತು.
ಯುವತಿಯು ಅನ್ನಪೂರ್ಣ ಕಾಲೋನಿ ನಿವಾಸಿಯಾಗಿದ್ದು, ಬಿಕಾಂ ಪದವಿಯನ್ನು ಪೂರೈಸಿರುವ ಜತೆಗೆ ಆಧ್ಯಾತ್ಮಿಕ ಶಿಕ್ಷಣವನ್ನೂ ಪಡೆದಿದ್ದಾಳೆ. 2016ರಲ್ಲಿ ಇಂದೋರ್ನ ಬ್ರಹ್ಮಕುಮಾರಿ ಆಶ್ರಮದಲ್ಲಿ ವಾಸ ಆರಂಭಿಸಿ ಸಮಾಜಸೇವೆ ಮಾಡುತ್ತಿದ್ದಾಳೆ. ಇತರ ಸಹೋದರಿಯರು ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಡುತ್ತಿದ್ದನ್ನು ನೋಡಿದ ಯುವತಿ, ನೋಡಿ ಎರಡು ದಿನಗಳ ಹಿಂದೆ ಶಿವನನ್ನು ಮದುವೆಯಾಗಲು ಯೋಚಿಸಿದ ಬಳಿಕ ಈ ವಿಚಾರವನ್ನು ಪೋಷಕರ ಬಳಿ ಹೇಳಿಕೊಂಡಾಗ ಅವರು ಕೂಡ ಆಕೆಗೆ ಬೆಂಬಲಿಸಿದ್ದರು. ಆದರೆ ಇದಕ್ಕೆ ಅಕ್ಕಪಕ್ಕದ ಜನರು ವಿರೋಧ ವ್ಯಕ್ತಪಡಿಸಿದ್ದರು.
ಗೋಲ್ಡಿ ಅವರ ತಂದೆ ಬಲರಾಮ್ ಅಂಚೆ ಕಚೇರಿಯಲ್ಲಿ ಉಪ ಪೋಸ್ಟ್ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಕಿರಣ್ ಗೃಹಿಣಿ. ಆಕೆಗೆ ರಾಹುಲ್ ಎಂಬ ಹಿರಿಯ ಸಹೋದರನಿದ್ದು, ನಿನಿ ಮತ್ತು ನ್ಯಾನ್ಸಿ ಕಿರಿಯ ಸಹೋದರಿಯರು ಇದ್ದಾರೆ. ಕೆಲವು ತಿಂಗಳ ಹಿಂದೆ ರಾಜಸ್ಥಾನದ ಜೈಪುರದಲ್ಲೂ ಇಂತಹ ಪ್ರಕರಣ ಬೆಳಕಿಗೆ ಬಂದಿತ್ತು. ಇಲ್ಲಿನ ಪೂಜಾ ಸಿಂಗ್ ಎಂಬ ಯುವತಿ ಭಗವಾನ್ ಕೃಷ್ಣನನ್ನು ಮದುವೆಯಾಗಿದ್ದಳು.
Leave a Reply