ಸಾವಳಗಿ: ಶಿವನ ನಾಮಸ್ಮರಣೆ ಮಾಡುವ ಭಕ್ತರಾಗಬೇಕು. ಶಿವನ ಕರುಣೆ ನಮಗೆ ಸಿಗಬೇಕಾದರೆ ಸತತ ಶಿವನ ದ್ಯಾನದಲ್ಲಿರಬೇಕು. ಅಂಥ ಶಿವನ ಶಕ್ತಿ ಶಿವಲಿಂಗೇಶ್ವರರಲ್ಲಿದೆ ಎಂದು ಹಿರೇ ಸಾವಳಗಿಯ ಶ್ರೀ ಶಿವಲಿಂಗೇಶ್ವರ ಮಠದ ಪರಮಪೂಜ್ಯ ಶ್ರೀ ಗುರುನಾಥ ಸ್ವಾಮೀಜಿ ಹೇಳಿದರು.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಇರುವ ಗುಡ್ಡದ ಶಿವಲಿಂಗೇಶ್ವರ ರಥೋತ್ಸವ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿ, ದೇವರು ಒಬ್ಬನೇ, ನಾಮ ಹಲವು. ನಾವು ಭಕ್ತಿಯಿಂದ ದೇವರನ್ನು ಪೂಜಿಸಿದರೆ ಆತನ ಕಪೆ ನಮ್ಮದಾಗುತ್ತದೆ. ಸಂಸಾರವೆಂಬ ಸಾಗರದಿಂದ ಪಾರಾಗಿ ಮುಕ್ತಿ ಹೊಂದಲು ಗುರುವಿನ ದಯೆ ಇರಬೇಕು. ನಾಮಸ್ಮರಣೆಯಲ್ಲಿ ಮುಕ್ತಿ ನೀಡುವ ಶಕ್ತಿ ಇದೆ.
ಮಾನವರಾಗಿ ಹುಟ್ಟಿ ಅರಿವನ್ನು ಪಡೆದುಕೊಂಡು ಅರಿವಿನ ಜ್ಞಾನ ನಮಗಿಲ್ಲದಿದ್ದರೆ ಮಾನವ ಜನ್ಮಕ್ಕೆ ಬಂದದ್ದು ವ್ಯರ್ಥವಾಗುತ್ತದೆ. ನಾಮಸ್ಮರಣೆ ಮಾಡಲು ವೇಳೆಯ ನಿಗದಿಬೇಡಾ. ಯಾವಾಗಬೇಕಾದರೂ ಮಾಡಬಹುದು. ಕೆಲಸ, ಊಟ, ನಿದ್ದೆ ಮಾಡುವಾಗ ಸಹ ಗುರುನಾಮಸ್ಮರಣೆ ಇರಲಿ ಎಂದರು.

ಜಾತ್ರೆಯಲ್ಲಿ ಅರಟಾಳ, ಹಾಲಳ್ಳಿ, ಸಾವಳಗಿ, ತುಂಗಳ, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಥೋತ್ಸವದಲ್ಲಿ ಹಲವಾರು ವಾದ್ಯಮೇಳದವರು ಮತ್ತು ಸಾವಿರಾರು ಭಕ್ತರು ಶಿವಲಿಂಗೇಶ್ವರ ಮಹಾರಾಜಕಿ ಜೈ ಎಂಬ ಜಯಘೋಷ ಮೊಳಗಿಸಿ ರಥೋತ್ಸವದಲ್ಲಿ ಬಾಗವಹಿಸಿದ್ದರು. ಹರಕೆ ಹೊತ್ತವರು ದೇವರಿಗೆ ದೀರ್ಘ ದಂಡ ನಮಸ್ಕಾರ ಮತ್ತು ಖಾರಿಕ ಪೇಡಾ ಬೆಂಡ ಬತ್ತಾಸ, ಚುನಮುರಿ ಹಾರಿಸಿ ಹರಕೆ ತೀರಿಸಿದರು.
ನಂತರ ಅನ್ನಪ್ರಸಾದ ನೆರವೇರಿತು. ರಾತ್ರಿ 9 ಗಂಟೆಗೆ ಸದ್ಭಕ್ತರಿಂದ ಭಜನಾ ಪದಗಳೊಂದಿಗೆ ಶಿವ ನಾಮಸ್ಮರಣೆ ನಡೆಯಿತು. ಇದೇ ಸಂದರ್ಭದಲ್ಲಿ ವಿವಿಧ ಗ್ರಾಮದ ಗ್ರಾಮಸ್ಥರು, ಊರಿನ ಹಿರಿಯರು ಯುವಕರು ಸೇರಿದಂತೆ ಅನೇಕರು ಭಾಗವಹಿಸಿದ್ದರು.















Leave a Reply