
ಸ್ವಂತ ಉದ್ಯಮ ಪ್ರಾರಂಭ ಮಾಡಲು ಅಗತ್ಯವಾದ ವಿಶಿಷ್ಟ ಜ್ಞಾನ ಮತ್ತು ಚಿಂತನೆಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಹತ್ತಾರು ಮಂದಿಗೆ ಬದುಕು ನೀಡುವುದು ಸ್ವ ಉದ್ಯೋಗದಿಂದ ಸಾಧ್ಯ. ನಾಯಕತ್ವ, ದೂರದೃಷ್ಟಿ ಮತ್ತು ಧೈರ್ಯ ಮುಂತಾದ ಗುಣಗಳನ್ನು ಅಳವಡಿಸಿಕೊಂಡು ಉದ್ಯಮ ಕ್ಷೇತ್ರದೆಡೆಗೆ ವಿದ್ಯಾರ್ಥಿಗಳು ಮನ ಮಾಡಬೇಕು ಎಂದು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮ ಅಭಿವೃದ್ಧಿ ಸಂಸ್ಥೆಯ ಮಂಗಳೂರು ವಿಭಾಗದ ಸಹಾಯಕ ನಿರ್ದೇಶಕ ಶ್ರೀ ಸುಂದರ ಮಾಲ ಹೇಳಿದರು. ಅವರು ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉದ್ಯಮಶೀಲತೆ ಅರಿವು ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗು ಸ್ಟಾರ್ ಸುವರ್ಣ ವಾಹಿನಿಯ ನಿರ್ದೇಶಕರಾದ ಶ್ರೀ ಅವಿನಾಶ್ , ಜೀವನದಲ್ಲಿ ಯಶಸ್ಸು ಪಡೆಯಲು ಶ್ರದ್ಧೆ ಮತ್ತು ಶ್ರಮ ತುಂಬಾ ಅವಶ್ಯಕ. ಆರಂಭದಲ್ಲಿ ಅನೇಕ ವಿಘ್ನಗಳು ಎದುರಾದರೂ ಎದೆಗುಂದದೆ ಸಾಗಿದರೆ ನಾವು ಅಂದುಕೊಂಡದ್ದನ್ನು ಸಾಧಿಸಬಹುದು ಎಂದು ಉತ್ತೇಜನಾ ಮಾತುಗಳನ್ನು ಆಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ವೆಂಕಟರಾಮ ಭಟ್ ವಹಿಸಿ ವಿದ್ಯಾರ್ಥಿ ದೆಸೆಯಲ್ಲಿಯೇ ಉದ್ಯಮ ಶೀಲತೆಯನ್ನು ಅಳವಡಿಸಿಕೊಂಡಲ್ಲಿ ಮುಂದೆ ಉದ್ಯೋಗ ಹುಡುಕುವುದಕ್ಕಿಂತ ಉದ್ಯೋಗದಾತ ಆಗಬಹುದು ಎಂದು ಹೇಳಿದರು . ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಗಿರೀಶ್ ಶಾನುಭೋಗ್ ಸ್ವಾಗತಿಸಿ ಆಂತರಿಕ ಗುಣಮಟ್ಟ ಭರವಸ ಕೋಶದ ಸಂಚಾಲಕರಾದ ಡಾ. ವಸಂತ ಜಿ ವಂದಿಸಿದರು. ಅಂತಿಮ ಎಂಕಾಂ ವಿದ್ಯಾರ್ಥಿನಿ ಕು. ಸುಪ್ರೀತಾ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಾಗಾರದ ಅಂಗವಾಗಿ ನಡೆದ ಮೂರು ವಿಚಾರ ಗೋಷ್ಠಿಗಳಲ್ಲಿ ವಿಷಯ ತಜ್ಞರಾಗಿ ಭಾಗವಹಿಸಿದ ಶ್ರೀ ಸುಂದರ ಮಾಲ ರವರು ಉದ್ಯಮಶೀಲತೆಗೆ ಸರಕಾರದ ಸವಲತ್ತುಗಳ ಕುರಿತು ವಿಚಾರ ಮಂಡಿಸಿದರು. ಎರಡನೇ ಗೋಷ್ಠಿಯಲ್ಲಿ ಕುಂದಾಪುರದ ಜ್ಞಾನ ಜ್ಯೋತಿ ಅಕಾಡೆಮಿಯ ನಿರ್ದೇಶಕರಾದ ಶ್ರೀ ಸತ್ಯನಾರಾಯಣ ಇವರು ಗುರಿ ನಿರ್ಧಾರ ಮತ್ತು ಉದ್ಯಮಶೀಲತೆ ಎನ್ನುವ ವಿಷಯದ ಕುರಿತು ಮಾತನಾಡಿದರು. ಮೂರನೇ ಗೋಷ್ಠಿಯಲ್ಲಿ ಸೃಷ್ಟಿ ಇನ್ಫೋಟೆಕ್ ಕುಂದಾಪುರ ಇದರ ನಿರ್ದೇಶಕರಾದ ಶ್ರೀ ಹರ್ಷವರ್ಧನ ಶೆಟ್ಟಿ ಇವರು ಯಶಸ್ವಿ ಉದ್ಯಮಿ ವಿಷಯದ ಕುರಿತು ಉತ್ತೇಜಕವಾಗಿ ವಿಷಯ ಮಂಡಿಸಿದರು.














Leave a Reply