
ಭಟ್ಕಳ: ರಾಜ್ಯ ಹೆದ್ದಾರಿಯಲ್ಲಿ ವಾಹನ ಸವಾರರ ಬೆಳಗಿನ ಜಾವ ಹೊಂಚು ಹಾಕಿ ಅಡ್ಡಗಟ್ಟಿ ದರೋಡೆಗೆ ಸಂಚು ರೂಪಿಸಿದ್ದ ಐವರ ಗ್ಯಾಂಗ್ ಪೈಕಿ ಮೂವರನ್ನು ಬಂಧಿಸುವಲ್ಲಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಬಿಲಾಲಖಂಡ ಗ್ರಾಮದ ಸಾಗರ್ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ಐವರು ದರೋಡೆಗೆ ಸಂಚು ರೂಪಿಸಿ ಚಾಕು, ಖಾರಪುಡಿ, ಮಂಕಿಕ್ಯಾಪ್, ಬೆಲ್ಟ್, ತಾಡಪತ್ರೆ ಸಹಿತ ಇನ್ನೋವಾ ಕಾರಿನಲ್ಲಿ ಸಜ್ಜಾಗಿದ್ದ ದರೋಡೆಕೋರರ ಗುಳ್ಮಿರಸ್ತೆ ಕ್ರಾಸ್ ಹತ್ತಿರ ಗ್ರಾಮೀಣ ಠಾಣೆ ಪಿಎಸ್ಐ ರನ್ನಗೌಡ್ ಪಾಟೀಲ್ ವಿಚಾರಿಸಲು ತೆರಳಿದಾಗ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾರು ಹಿಮ್ಮುಖ ಚಲಿಸಿ ನಿಯಂತ್ರಣ ತಪ್ಪಿ ಗಟಾರಿನಲ್ಲಿ ಬಿದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬಂಧಿತ ಮೂವರು ಆರೋಪಿಗಳು “ಗರುಡ ಗ್ಯಾಂಗ್ನ” ಸದಸ್ಯರು ಎಂದು ತಿಳಿದು ಬಂದಿದೆ. ಗರುಡ ಗ್ಯಾಂಗ್ ಆರೋಪಿತರಲ್ಲಿ ಮಂಗಳೂರಿನ ಚೊಕ್ಕಬೆಟ್ಟು ರಸ್ತೆಯ ಜಲಾಲ್ ಹುಸೈನ್ (39) ಎಂದು ಗುರುತಿಸಲಾಗಿದ್ದು, ಈತನ ಮೇಲೆ ಈಗಾಗಲೇ ಪ್ರಕರಣವೊಂದು ದಾಖಲಾಗಿದೆ. ಮತ್ತೊಬ್ಬ ಭಟ್ಕಳದ ಹೆಬಳೆಯ ಗಾಂಧಿನಗರ ನಿವಾಸಿ ಚಾಲಕ ವೃತ್ತಿಯ ನಾಶೀರ್ ಹಕೀಮ್ (26) ಮೇಲೆ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿದೆ. ಇನ್ನೊಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಮೇಲೆ 1 ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಕಾರಿನಲ್ಲಿದ್ದ ಉಳಿದ ಇಬ್ಬರು ಆರೋಪಿಗಳು ಪೊಲೀಸರ ಕಂಡು ಪರಾರಿಯಾಗಿದ್ದು, ಈ ಇಬ್ಬರು ಆರೋಪಿಗಳಲ್ಲಿ ಒಬ್ಬ ಮಗ್ದಂ ಕಾಲನಿ ನಿವಾಸಿ ಜೀಶಾನ್ ಹಾಗೂ ಬಟ್ಟಾಗಾಂವ ನಿವಾಸಿ ನಬೀಲ್ ಎಂದು ಗುರುತಿಸಲಾಗಿದ್ದು, ಪರಾರಿಯಾದ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿದ್ದಾರೆ.
Leave a Reply