ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಕಾರ್ಕಡದ ಕಾವಡಿ ಸೇತುವೆ ಬಳಿ ಅವೈಜ್ಞಾನಿಕ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಕೃಷಿಕರ ದೂರಿನ ಅನ್ವಯ ಸ್ಥಳಕ್ಕೆ ಉಡುಪಿ ಗಣಿ ಇಲಾಖೆ ಅಧಿಕಾರಿ ಅಶ್ವಿನಿ ಭೇಟಿ ನೀಡಿದರು.
ಈ ವೇಳೆ ಇಲಾಖಾಧಿಕಾರಿಗಳು ಅವೈಜ್ಞಾನಿಕ ಮರಳುಗಾರಿಕೆಗೆ ಸಹಕರಿಸಿದ್ದಾರೆ ಎಂದು ಆರೋಪಿಸಿ ವಾಹನ ತಡೆದು ತರಾಟೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಸಾಮಾಜಿಕ ಹೋರಾಟಗಾರ ನಾಗರಾಜ್ ಗಾಣಿಗ ಸ್ಥಳಕ್ಕೆ ಬಂದು ಉಂಡು ಹೋದ ಕೊಂಡು ಹೋದ ಎನ್ನುವಂತೆ ಅಧಿಕಾರಿಗಳು ಪ್ರಭಾವಿ ವ್ಯಕ್ತಿಗಳ ಕೈಯೊಳಗೆ ಕಾರ್ಯನಿರ್ವಹಿಸುವಂತೆ ತೋರ್ಪಡಿಸುತ್ತದೆ.
ಸುತ್ತಮುತ್ತ ಸಾವಿರಾರು ಎಕ್ಕೆರೆ ಕೃಷಿ ಭೂಮಿ ಇರುವ ಈ ಪರಿಸರದಲ್ಲಿ ಕೃಷಿಕರ ಅಥವಾ ಗ್ರಾಮಸ್ಥರ ಪರಿಗಣನೆ ಶೂನ್ಯವಾಗಿದೆ. ಕೃಷಿಯನ್ನೆ ಅವಲಂಬಿತವಾಗಿರುವ ಈ ಪರಿಸರದಲ್ಲಿ ಅಕ್ರಮ, ಅವೈಜ್ಞಾನಿಕ ಮರಳುಗಾರಿಕೆ ಎಷ್ಟು ಸರಿ ಗ್ರಾಮಸ್ಥರ ನೋವಿಗೆ ಬೆಲೆ ಇಲ್ಲವಾ ಎಂದು ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು. ಈ ವೇಳೆ ಗ್ರಾಮಸ್ಥರು,ಕೃಷಿಕರು ಧ್ವನಿಗೂಡಿಸಿದರು. ಮಧ್ಯಪ್ರವೇಶಿಸಿದ ಮರಳುಗಾರಿಕೆ ನಡೆಸುತ್ತಿರಯವವರ ಮಧ್ಯೆ ಮಾತಿನ ಚಕಮಕಿ ನಡೆಯಿತು ಸ್ವಲ್ಪ ಹೊತ್ತು ಬಿಗುವಿನ ವಾತಾವರಣ ನಿರ್ಮಾಣಗೊಂಡಿತು.
ಹೋರಾಟ ತೀವ್ರ
ಜನಸಾಮಾನ್ಯರ ಕೃಷಿಕರ ಅಳಲಿಗೆ ಸ್ಪಂದಿಸದೆ ಅವೈಜ್ಞಾನಿಕ ಮರಳುಗಾರಿಕೆಗೆ ಜಿಲ್ಲಾಡಳಿತ ತಡೆ ನೀಡದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.
ಪೋಲಿಸ್ ಇಲಾಖೆ ಮಧ್ಯಪ್ರವೇಶ
ಅವೈಜ್ಞಾನಿಕ ಮರಳುಗಾರಿಕೆ ನಡೆಸುವ ಸ್ಥಳದಲ್ಲಿ ಅಧಿಕಾರಿಗಳು,ಗ್ರಾಮಸ್ಥರು,ಮರಳುಗಾರಿಕೆ ನಡೆಸುವವರ ಮಧ್ಯೆ ಮಾತಿನ ಕಲಹಕ್ಕೆ ಕೋಟ ಪೋಲಿಸ್ ಠಾಣಾಧಿಕಾರಿ ತೇಜಸ್ವಿ ಮಧ್ಯಪ್ರವೇಶಿಸಿ ವಾಗ್ವಾದವನ್ನು ತಿಳಿಗೊಳಿಸಿ ಕಾನೂನಿನ ಚೌಕಟ್ಟಿನ ಒಳಗೆ ಸಮಸ್ಯೆ ಇತ್ಯರ್ಥಗೊಳಿಸಿಕೊಳ್ಳಿ ಅಧಿಕಾರಿಗಳ ವಾಹನ ಅಡ್ಡಗಟ್ಟುವುದು ಸೂಕ್ತವಲ್ಲ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟು ಅಧಿಕಾರಿಗಳನ್ನು ಸ್ಥಳದಿಂದ ತೆರಳುವಂತೆ ಮಾಡಿದರು.