ಕೋಟ: ಕಲಾವಿದನಾದವನಿಗೆ ಸಮಾಜದ ನೋವು-ನಲಿವು, ಸುಖ-ದುಃಖಗಳ ಅರಿವಿರುತ್ತದೆ. ಕಲಾವಿದನು ಮಾನಸಿಕವಾಗಿ ಶ್ರೀಮಂತವಾಗಿರುತ್ತಾನೆ. ಸಮಾಜಕ್ಕೆ ಸಂದೇಶ ಸಾರುವ ಮಾಧ್ಯಮವಾಗಿ ರಂಗಭೂಮಿಯನ್ನು ಆಯ್ದುಕೊಂಡ ಕಲಾವಿದನು ರಂಗಮುಖೇನ ತನ್ನೆಲ್ಲಾ ಅರಿವನ್ನು ಸಮಾಜಕ್ಕೆ ಸಾರುತ್ತ ಉತ್ಕೃಷ್ಠ ಸ್ಥಾನವನ್ನು ಅಲಂಕರಿಸುತ್ತಾನೆ.
ವೃತ್ತಿಯಾಗಿಯೋ, ಹವ್ಯಾಸಿಯಾಗಿಯೋ ಕಲಾ ಪ್ರಪಂಚವನ್ನು ಅಪ್ಪಿಕೊಂಡು, ಒಪ್ಪಿಕೊಂಡು ಸಮಾಜದ ಏಳು ಬೀಳುಗಳನ್ನು ಸಮಾಜಕ್ಕೆ ಸಾರುವ ಕಾಯಕ ಅತ್ಯುತ್ತಮವಾದದ್ದು ಎಂದು ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನೀಲ್ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನ್ನಾಡಿದರು.
ಶ್ರೀ ಕೈಲಾಸ ಕಲಾಕ್ಷೇತ್ರದ ಆಶ್ರಯದಲ್ಲಿ, ಧಮನಿ ಹಾಗೂ ದಿಮ್ಸಾಲ್ ಈ ಉಭಯ ಸಂಸ್ಥೆಗಳ ಸಹಕಾರದಲ್ಲಿ ಏಪ್ರಿಲ್ 15ರಂದು 5ನೇ ದಿನದ ರಜಾರಂಗು ಶಿಬಿರವನ್ನು ಉದ್ಧೇಶಿಸಿ ಸುನೀಲ್ ಮಾತನ್ನಾಡಿದರು. ಯಾಂತ್ರಿಕ ಬದುಕನ್ನು ಬದಿಗೊತ್ತಿ, ಜೀವನವನ್ನು ಆಯ್ಕೆ ಮಾಡಿಕೊಳ್ಳುವ ಬುದ್ಧಿಗೆ ಪುಷ್ಠಿ ನೀಡುವ ಕಾರ್ಯ ಇಂತಹ ಶಿಬಿರದ್ದಾಗಿರುತ್ತದೆ. ಶಿಬಿರದಲ್ಲಿ ಸ್ವಂತ ಪ್ರತಿಭೆಗಳಿಗೆ ಆದ್ಯತೆ ನೀಡುತ್ತಿರುವಾಗ ಒಂದಷ್ಟು ಮಕ್ಕಳ ಪ್ರತಿಭೆಯನ್ನು ವೀಕ್ಷಿಸುತ್ತಾ ಸಮಾಜದಲ್ಲಿ ತಾವೇನು ಆಗಬೇಕು? ಹೇಗೆ ಗುರುತಿಸಿಕೊಳ್ಳಬೇಕೆನ್ನುವುದನ್ನು, ಸ್ವಂತಿಕೆಯನ್ನು ಬಿಂಬಿಸುವುದಕ್ಕೆ ಶಿಬಿರದಲ್ಲಿ ಸಾಧ್ಯವಾಗುತ್ತದೆ. ಇದನ್ನು ನಡೆಸಿಕೊಡುವ ರಂಗ ನಿರ್ದೇಶಕರ ಶ್ರಮ ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಸುನೀಲ್ ಅಭಿಪ್ರಾಯಪಟ್ಟರು. ರಂಗ ನಿರ್ದೇಶಕರುಗಳಾದ ಅಶೋಕ್ ಮೈಸೂರು, ರಂಜಿತ್ ಬ್ರಹ್ಮಾವರ, ಶ್ರೀಶ ತೆಕ್ಕಟ್ಟೆ ಉಪಸ್ಥಿತರಿದ್ದರು. ಚಿಣ್ಣರ ಕಾರ್ಯಕ್ರಮದ ನಿರೂಪಣೆ, ವರದಿ, ಪರಿಚಯ, ಸ್ವಾಗತ, ಧನ್ಯವಾದಗಳನ್ನು ಪ್ರಸ್ತುತಪಡಿಸಿದರು.
ಶ್ರೀ ಕೈಲಾಸ ಕಲಾಕ್ಷೇತ್ರದ ಆಶ್ರಯದಲ್ಲಿ, ಧಮನಿ ಹಾಗೂ ದಿಮ್ಸಾಲ್ ಈ ಉಭಯ ಸಂಸ್ಥೆಗಳ ಸಹಕಾರದಲ್ಲಿ ಏಪ್ರಿಲ್ 15ರಂದು 5ನೇ ದಿನದ ರಜಾರಂಗು ಶಿಬಿರವನ್ನು ಉದ್ಧೇಶಿಸಿ ಸುನೀಲ್ ಮಾತನ್ನಾಡಿದರು.ರಂಗ ನಿರ್ದೇಶಕರುಗಳಾದ ಅಶೋಕ್ ಮೈಸೂರು, ರಂಜಿತ್ ಬ್ರಹ್ಮಾವರ, ಶ್ರೀಶ ತೆಕ್ಕಟ್ಟೆ ಉಪಸ್ಥಿತರಿದ್ದರು.